Monday 14 July 2014

ವ್ಯವಸ್ಥೆಯನ್ನು ಭಕ್ಷಿಸುವವರ ಕೈಗೆ ಸಿಕ್ಕ ನನ್ನ ಕರ್ನಾಟಕದ ಪಾಡೇನು?

ಪ್ರಾಮಾಣಿಕ ಶಾಸಕ ರಮೇಶ್ ಕುಮಾರ್, ಭೇಷ್! ಭೇಷ್!! ಭೇಷ್!!!
ಮಾಜಿ ಮುಖ್ಯ ಮಂತ್ರಿಯ ನಂತರ ಅದೇ ಸಾಲಿಗೆ ಬಂದ ಮತ್ತೊರ್ವ ಶಾಸಕ ರಮೇಶ್ ಕುಮಾರ್ ರವರಿಗೆ
"ತಪ್ಪನ್ನು ರಾಜಾರೋಷವಾಗಿ ಒಪ್ಪ್ಪಿಕೊಳ್ಳುವ  ರಾಜಕಾರಣಿಗಳ ಕ್ಲಬ್ಗೆ ಸ್ವಾಗತ"
ಚುನಾವಣಾ ಆಯೋಗ ವಿಧಾನ ಸಭಾ ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆಂದು ನಿಗದಿಪಡಿಸಿರುವ ಮೊತ್ತ ೧೬ ಲಕ್ಷ ಮಾತ್ರ!
(ಇಷ್ಟು ದೊಡ್ಡ ಮೊತ್ತವನ್ನು ಚುನಾವಣೆಗೆ ಖರ್ಚು ಮಾಡಿದ ಮೇಲೆ ಸಂಪಾದಿಸುವ ಸರಿಯಾದ ಮಾರ್ಗವಾದರೂ ಹೇಗೆ ಎಂಬುದರ
ಬಗ್ಗೆ ಚುನಾವಣಾ ಆಯೋಗದ ಬಳಿ ಉತ್ತರವಿರಲಾರದು, ಅದೆಲ್ಲ "ಅಲಿಖಿತ ಉತ್ತರಗಳು" "ಅದರೊಳಗೆ" ಇರುವವರಿಗೆ ಮಾತ್ರ "ಅದು" ಅರ್ಥವಾಗುತ್ತದೆ)
ಆದರೆ ಮಾನ್ಯ ಶಾಸಕ ರಮೇಶ್ ಕುಮಾರ್ ಮೂರೂವರೆ ಕೋಟಿ ಖರ್ಚು ಮಾಡಿದ್ದಾರೆಂದರೆ ಅವರ ಆದಾಯದ ಲೆಕ್ಕಾಚಾರ ಎಷ್ಟಿರಬಹುದು?
ಯಾವ ಯಾವ ಮೂಲದಿಂದ ಇದನ್ನು ಸರಿದೂಗಿಸಬಹುದು? ೬೦ ತಿಂಗಳು ಇವರು ಅಧಿಕಾರದಲ್ಲಿದ್ದರೆ
ಈ ಮೂರುವರೆ ಕೋಟಿಯನ್ನು ಸರಿದೂಗಿಸಲು ಪ್ರತಿ ತಿಂಗಳು ಸುಮಾರು ರೂ. ೫೯೦೦೦ದಷ್ಟು ಹಣವನ್ನು ಉಳಿಸಬೇಕಾಗುತ್ತದೆ.
೬೦ ತಿಂಗಳಲ್ಲಿ ಇವರು ಪಡೆಯುವ ಭತ್ಯೆ ಎಷ್ಟು? ಇವರ ಖರ್ಚು ಎಷ್ಟು?  ಇದನ್ನೆಲ್ಲಾ ಪ್ರಶ್ನಿಸಲು ನನ್ನ ಭವ್ಯ ಭಾರತದಲ್ಲಿ ಯಾವ ವ್ಯವಸ್ಥೆ ಇದೆ?
ರಾಜಾರೋಷವಾಗಿ ಕರ್ನಾಟಕ ಸರ್ಕಾರದ ಆಡಳಿತ ಸದನದಲ್ಲಿ ನಿಂತು ತಾನು ಸದನಕ್ಕೆ ಹಿಂಬಾಗಿಲ ಮುಖಾಂತರ ಆರಿಸಿಬಂದ ಕುರಿತು ಸಮರ್ಥಿಸುತ್ತಿದ್ದರೆ,
ನನ್ನ ಭಾರತದ ಕಾನೂನು ವ್ಯವಸ್ಥೆ ಮೂಕ ಪ್ರೇಕ್ಷಕವಾಗಿ ನೋಡುವಷ್ಟು ಹದಗೆಟ್ಟು ಹೋಗಿದೆಯೇ? ಅಯ್ಯೋ, ಬೇಲಿಯೇ ಪೈರನ್ನು ಮೇಯ್ದಂತೆ,
ಕಾನೂನು ರೂಪಿಸಬೇಕಾದವರೇ ವ್ಯವಸ್ಥೆಯನ್ನು ಅವ್ಯವಸ್ಥೆ ಮಾಡಿದರಲ್ಲಾ? ಇನ್ನು ಅಧಿವೇಶನ ನಡೆಸಿ ಇಂತಹವರು ರೂಪಿಸುವ
ಕಾನೂನು ನನ್ನ  ರಾಜ್ಯವನ್ನು ಸುಭಿಕ್ಷವಾಗಿ, ಸಮಾಧಾನವಾಗಿಡಲು ಸಾಧ್ಯವೇ? ವ್ಯವಸ್ಥೆಯನ್ನು ಭಕ್ಷಿಸುವವರ ಕೈಗೆ ಸಿಕ್ಕ ನನ್ನ ಕರ್ನಾಟಕದ ಪಾಡೇನು?

No comments:

Post a Comment